Sunday, December 27, 2020

ನೇರಳೆ ಗುಲಾಬಿ

 ನಿಶಾ ಊಟ ಕೊಡ್ತೀಯಾ ಎಂದು ಆಕಾಶ್  ಕೈ ಕಾಲು ತೊಳೆದೆಕೊಂಡು ಅಮ್ಮನ ಪಕ್ಕ ಕುಳಿತು ತನ್ನ ಮಡದಿಗೆ ಕೇಳಿದ, ಸರಿ ಎಂದು ಅನ್ನ, ತೊವ್ವೆ ತಟ್ಟೆಗೆ ಹಾಕಿ ಕೊಟ್ಟಳು, ನಂತರ ಅತ್ತೆಗೆ ಊಟ ಬಡಿಸಿ ತಾನು ಊಟ ಮಾಡಿದಳು ನಂತರ   ಅಡಿಗೆ ಮನೆ ಸಿಂಕ್ ನಲ್ಲಿದ್ದ ಪಾತ್ರೆಗಳನ್ನು ತೊಳೆದು, ಬೆಳಗ್ಗೆ ತಿಂಡಿಗೆ ತರಕಾರಿ ಹೆಚ್ಚಿಟ್ಟು ಮಲಗಿದಳು. 


ಬೆಳಗ್ಗೆಯೇ ಎದ್ದ ನಿಶಾ ಕಾಫಿಗೆ ಡಿಕಾಕ್ಷನ್ ಹಾಕಿ, ಆಕಾಶ್   ಜೊತೆ ಕಾಫಿ ಕುಡಿದು  ತಿಂಡಿ ರೆಡಿ ಮಾಡಿದಳು, ಎಲ್ಜಿ ಅಲ್ಟ್ರಾ ಗ್ರೈಂಡರ್ನಲ್ಲಿ ರುಬ್ಬಿದ ದೋಸೆಗೆ ಕೆಂಪು ಚಟ್ನಿ  ಮತ್ತು ಆಲೂಗಡ್ಡೆ ಪಲ್ಯ ರುಚಿಕೊಟ್ಟವು. ನಂತರ ಆಕಾಶ್ ಕೆಲಸಕ್ಕೆ  ನಂತರ ತಾನೂ ಹೊರಟು ಅತ್ತೆಗೆ ಬಾಗಿಲು ಹಾಕಿ ಕೊಳ್ಳಲು ಹೇಳಿ ಕಾರ್ ನಲ್ಲಿ ತನ್ನ ಕ್ಲಿನಿಕ್ ಗೆ ಹೊರಟಳು.  

ನಗರದ ಮಧ್ಯಭಾಗದಲ್ಲಿರುವ ಕ್ಲಿನಿಕ್ ತಲುಪಲು ಎಚ್ಚೆಂದರೆ ಹತ್ತು ನಿಮಿಷ ಸಾಕು ಎಂದು ನಿಧಾನವಾಗಿ ಡ್ರೈವ್ ಮಾಡುತಿದ್ದಳು. ಅವಳ ಕಾರ್ ನ ಮೇಲಿದ್ದ ಡಾಕ್ಟರ್ ಲೋಗೋನಿಂದ [ಆಸ್ಕ್ಲೆಪಿಯೋಸ್ - ಇದು ಗ್ರೀಕ್ ದೇವರ ಚಿನ್ಹೆ] ಆದ್ದರಿಂದ ಯಾವ ಪೊಲೀಸರೂ ಕೂಡ ಗಾಡಿಗೆ ಕೈಯೊಡ್ಡಲಿಲ್ಲ. ಗಾಡಿ ನಿಲ್ಲಿಸಿ ಆಗಲೇ ಕಾಯುತಿದ್ದ ಪೇಷಂಟಗಳನ್ನು ನೋಡಲು ಶುರುಮಾಡಿದಳು. 

ಮೊದಲು ಬಂದವರು ನಮಸ್ಕಾರ ಎಂದು ಹೇಳಿ ನನ್ನ ಹೆಸರು ರಾಮಚಂದ್ರ ರಾಯ, ನಾನು ಮಂಡ್ಯದವನು , ಇವಳು ನನ್ನ ಮಗಳು  ಸುಶ್ಮಿತಾ. ಆಲನಹಳ್ಳಿಯಲ್ಲಿ ಡಿಗ್ರಿ ಓದುತ್ತಿದ್ದಾಳೆ.  ಡಿಗ್ರಿಗೆ ಸೇರಿದಾಗಿನಿಂದ  ಊಟ ತಿಂಡಿ ಕಡಿಮೆ ತಿನ್ನುತಿದ್ದಾಳೆ,  ಕೇಳಿದರೆ ಹಸಿವಿಲ್ಲ ಎನ್ನುತ್ತಾಳೆ.  ಯಾವ ಡಾಕ್ಟರಿಗೆ ತೋರಿಸಿದರೂ ಸರಿಯಾಗಿಲ್ಲ ಎಂದು ತಮ್ಮ ಬ್ಯಾಗಿನಿಂದ ರಕ್ತ ಪರೀಕ್ಷೆಯ ರಿಪೋರ್ಟ್ ಗಳು, ಹೊಟ್ಟೆಯ ಅಲ್ಟ್ರಾ ಸೌಂಡ್ ಸ್ಕ್ಯಾನಿಂಗ್ ಮತ್ತು ಎಂಡೊಸ್ಕೋಪಿಯ ಪತ್ರಗಳನ್ನು ಟೇಬಲ್ ಮೇಲಿಟ್ಟರು. 
ಡಾ। ನಿಶಾ ಅದ್ಯಾವುದನ್ನೂ ನೋಡದೆ ಸುಶ್ಮಿತಾಳ  ಮೇಲೆ ದೃಷ್ಟಿ ಹಾಯಿಸಿದರು. 


ಬೆಳ್ಳಗೆ ಉದ್ದವಿದ್ದ ಹುಡುಗಿ ಲಕ್ಷಣವಾಗಿ ಕಣ್ಣು ಕಪ್ಪು (ಕಣ್ಣಿನ ಕಾಡಿಗೆ) ಹಚ್ಚಿ, ಎತ್ತಲೋ ನೋಡುತ್ತ ಕುಳಿತಿದ್ದಳು, ಆದರೆ ದೇಹ ಸರಿಯಾದ ಪೋಷಣೆಯಿಲ್ಲದೆ ಕೃಶವಾಗಿತ್ತು. ನಂತರ ರಿಪೋರ್ಟ್ ಗಳನ್ನೂ ನೋಡಿದಾಗ ಎಲ್ಲ ಸರಿಯಾಗಿತ್ತು. 
ಸುಶ್ಮಿತಾ ಜೊತೆ ಮಾತನಾಡಿದಾಗ ತಿಳಿದದ್ದು ಅವಳಿಗೆ ಹಸಿವಿದ್ದಾಗ ಬೇರೊಂದು ಬಗೆಯ ಆನಂದ ದೊರೆಯುತ್ತದೆ ಹಾಗೂ ಊಟ ತಿಂಡಿ ತಿಂದರೆ ದಪ್ಪವಾಗುವ ಭಯ ವಿರುವುದು ಗೊತ್ತಾಗುತ್ತದೆ. ಮತ್ತೆ ವಿಚಾರ ಮಾಡಿದಾಗ ಡಿಗ್ರಿ ಸೇರುವ ಹೊತ್ತಿನಲ್ಲಿ ಜ್ವರ ಬಂದ ನಂತರ ಹೀಗೆಲ್ಲ ಆಗಲು ಶುರುವಾಗಿದ್ದು ಎಂದು ರಾಮಚಂದ್ರ ರಾಯರು  ಉತ್ತರಿಸದರು.  

ಅವರಿಗೆ ಸ್ವಲ್ಪ  ಹೊತ್ತು ಹೊರಗೆ ಕಾಯಲು ಹೇಳಿ, ಡಾ। ನಿಶಾ ಎರಡನೇ ರೋಗಿಯನ್ನು ಒಳ ಕರೆದರು. ಆಗ ಬಂದಿದ್ದು 45 ವರ್ಷದ ಮಾಲಾ ಎನ್ನುವ ಮಹಿಳೆ ಅವರ ಜೊತೆ 22 ವರ್ಷದ ಯುವಕನೋರ್ವ ಬಂದಿದ್ದ. ಕುರುಚಲು ಗಡ್ಡ ಹಾಗು ಮಾಸಿದ ಜೀನ್ಸ್ ದರಿಸಿದ್ದ ಹುಡುಗ ಪ್ರತಿಯೊಂದನ್ನು ಕಣ್ಣಿನಲ್ಲೇ ಪರೀಕ್ಷಿಸತೊಡಗಿದ್ದ. 

ಬಂದವರೇ ದಯಮಾಡಿ ಡಾಕ್ಟರ್ ನನಗೆ ನನ್ನ ಮಗನನ್ನು ಸುದ್ದ ಮಾಡಿ ಕೊಡಿ. ಇವನು ಒಂದು ವರ್ಷದಿಂದ ಸರಿಯಿಲ್ಲ ಎಂದರು . ಅವನು ಏನು ಓದುತಿದ್ದಾನೆ ಎಂದಾಗ ಅವನನ್ನು ಕಾಲೇಜಿನಿಂದ ಸಸ್ಪೆಂಡ್ ಮಾಡಿ ಆರು ತಿಂಗಳಾಯಿತು, ಅವನು ಒಬ್ಬನೇ ರೂಮಿನಲ್ಲಿ ಇರುತ್ತಾನೆ. ಸುಮ್ಮನೆ ಸಂಶಯಪಡುತ್ತಾನೆ, ಒಬ್ಬಂಟಿಯಾಗೇ ಮಾತನಾಡಿಕೊಳ್ಳುತ್ತಾನೆ. ಎಷ್ಟು ದೇವರು ದಿಂಡರು ಮಾಡಿದರು ಪ್ರಯೋಜನವಾಗಲಿಲ್ಲ. ಶಾಂತಿ ಮಾಡಿಸಿದರು ಗುಣವಾಗಲಿಲ್ಲ ಎಂದರು. ಅವನಿಗೆ ಬ್ಲಡ್ ಟೆಸ್ಟ್ ಮಾಡಲು ಹೇಳಿದ ಡಾಕ್ಟರ್. ರಿಪೋರ್ಟ್ ಬಂದ  ನಂತರ ಬನ್ನಿ ಎಂದರು. 

ನಂತರ ಡಾಕ್ಟರ್ ತಮ್ಮ ಅಲ್ಮೇರಾದಿಂದ ಕೆಲವು ರೆಫರೆನ್ಸ್ ಬುಕ್ ಅನ್ನು ತೆಗೆದು ಕೆಲವು ಟಿಪ್ಪಣಿಗಳನ್ನು ಓದಲು ಶುರುಮಾಡಿದರು. ತಾವು ಮಾನಸ ರೋಗದಲ್ಲಿ ಸ್ನಾತಕೋತ್ತರ ಪದವಿ ಮಾಡಿದಾಗ ಕೊಂಡ ಪುಸ್ತಕಗಳವು ಎಂಬುದನ್ನು ನೆನೆದು ಅವರು ಭಾವುಕರಾದರು. ತಾವು ಪದವಿ ಮುಗಿಸಿದ್ದು ಎಲ್ಲರೂ ಹಣ ಮತ್ತು ಹೆಸರು ಬರುವ ವಿಷಯ ತೆಗೆದುಕೋ ಅಂದಾಗ ತಾನು ಮಾನಸ ರೋಗ ತೆಗೆದುಕೊಂಡದ್ದು ಮತ್ತು ಅದಕೋಸ್ಕರ ತನ್ನ ಪ್ರೀತಿ ಪಾತ್ರರನ್ನು ಬಿಟ್ಟು ಹಾಸನದ ಖಾಸಗಿ ಕಾಲೇಜು ಸೇರಿದ್ದು ಅಲ್ಲಿ  ಹೋರಾಟ ಮಾಡಿದ 3 ವರ್ಷಗಳು ಅವರ ಕಣ್ಣಲ್ಲಿ ನೀರು ಬರಿಸಿದವು, ತಮ್ಮ ಕಪ್ಪನೆಯ ಕನ್ನಡಕ ತೆಗೆದುಕೊಂಡು ಕಣ್ಣು ಒರೆಸಿಕೊಂಡ ಅವರು, ಮುಖದ ಬಟ್ಟೆ ಮಾಸ್ಕ ಅನ್ನು ತೆಗೆದು ಚೇರ್ ನಲ್ಲಿ ಹಾಗೆಯೆ ಹಿಂದಕ್ಕೆ ಒರಗಿದರು. 

ತಾವು ಹಾಸನಕ್ಕೆ ಸೇರಿದ ಆ ದಿನಗಳು ತಮ್ಮ ಮುಂದೆ ಬಂದವು. ತಾವು ಪದವಿ ಓದಿದ ಕಾಲೇಜಿಗಿಂತ ಇಲ್ಲಿನ ಪರಿಸರ ಬೇರೆಯಿತ್ತು. ಎಲ್ಲಿ ನೋಡಿದರೂ ಒಣ ಪ್ರತಿಷ್ಠೆ, ದುರಹಂಕಾರ ಹಾಗು ತಾವು ಲೆಕ್ಚರರ್ ಎಂಬ ಸಂಸ್ಕಾರ ಮರೆತ ಭೋದಕ ವೃಂದ  ಬಗ್ಗೆ ಡಾ। ನಿಶಾಳಿಗೆ  ಆಶ್ಚರ್ಯ ಮತ್ತು ಬೇಸರ ತರಿಸಿದ್ದವು.  ಸೂಕ್ಷ್ಮ, ಮೃದು ಮತ್ತು ಹೊಳಪಿನ ಕಣ್ಣಿನ ಯುವ ಡಾಕ್ಟರಿಗೆ ಪ್ರಪಂಚ ಹೀಗೂ ಕೂಡ ಇರುತ್ತದೆ ಎಂದು ತಿಳಿದಿರಲಿಲ್ಲ. 
ಹತ್ತು ನಿಮಿಷ ಹೊರಗಡೆ ಹೋದರು ಥಟ್ ಅಂತ ಫೋನ್ ಮಾಡಿ ಎಲ್ಲಿದ್ದೀಯ, ಬಾ ಓ. ಪಿ. ಡಿ. ಗೆ ಎಂದು ಕರೆ ಮಾಡುವ ಲೆಕ್ಚರರ್ಗಳು ,  ಮೈ ಗೆ ಹುಷಾರಿಲ್ಲ ಅಂದರು ಮಲಗಲು ಬಿಡದ ಮಹಿಳಾ ಡೀನ್ ಮತ್ತು ವರ್ಷಕೊಂದು ಬಾರಿ ಊರಿಗೆ ಹೋಗಲು ಅನುಮತಿ ನಿರಾಕರಿಸುವ ವಿಭಾಗದ ಮುಖ್ಯಸ್ಥ ಇವರೆಲ್ಲರ ಮದ್ಯೆ ತಾನು ಪಿ ಜಿ ಮುಗಿಸಿದ್ದೇ ಆಶ್ಚರ ಎಂದುಕೊಂಡ ನಿಶಾ ತಮ್ಮ ಪತಿಗೆ ಕರೆ ಮಾಡಿ ಇಂದು ಊಟಕ್ಕೆ ಮನೆಗೆ ಬರಲಾಗುವುದಿಲ್ಲ. ಸಂಜೆ ಬೇಗ ಬರುತ್ತೇನೆ ಎಂದರು. ಆಕಾಶ್ ಅಲ್ಲಿಗೆ ಬಿರಿಯಾನಿ ಆರ್ಡರ್ ಮಾಡಲೇ ಅಂದರೂ ಮಾಂಸಾಹಾರ ಬೇಡ ನಾನು ತಿನ್ನುವುದು ತಿಂಗಳಿಗೆ ಒಮ್ಮೆ ಅಲ್ಲವೇ ಎಂದು ಪಕ್ಕದ ಹೊಟೇಲಿಂದ ಉತ್ತರ ಭಾರತದ ಥಾಲಿ ತರಲು ತಮ್ಮ ಹೆಲ್ಪರ್ ಆಂಟಿಗೆ ಹೇಳಿದರು. 

ಊಟ ಮುಗಿದ ಬಳಿಕ ಸುಶ್ಮಿತಾಳನ್ನು ಕರೆಸಿ ನೀನು ಡಿಗ್ರಿ ಮುಂಚೆ ಯಾರಿಗಾದರೂ ಮುತ್ತು ಕೊಟ್ಟಿದಿಯ ಎಂದರು? ಅದಕ್ಕೆ ನಿಶಾ ಹೌದು ಪಿ ಯು ಸಿ ಮುಗಿದ ಬಳಿಕ ಪಾರ್ಟಿ ಯೊಂದರಲ್ಲಿ ನನ್ನ ಸ್ನೇಹಿತನೊಬ್ಬನಿಗೆ ಮುತ್ತು ಕೊಟ್ಟಿದೆ ಅಷ್ಟೇ ಆದರೆ ದಯವಿಟ್ಟು ಇದನ್ನು ನಮ್ಮ ತಂದೆಗೆ ಹೇಳಬೇಡಿ ಎಂದಳು. 

ನಂತರ ರಾಮಚಂದ್ರ ರಾಯರನ್ನು ಕರೆಸಿದ ನಿಶಾ ನಿಮ್ಮ ಮಗಳಿಗೆ ಅನೋರೆಕ್ಸಿಯಾ ನರ್ವೋಸಾ ಎಂಬ ರೋಗ ಇದೆ ಇದನ್ನು ಗುಣ ಪಡಿಸಬಹುದು. ಎಂದು ಕೆಲವು ಮಾತ್ರೆಗಳನ್ನು ಬರೆದು ಕೊಟ್ಟರು. ಅವು ಎಪ್ಸ್ಟೀನ್-ಬಾರ್ ವೈರಸ್ ಅನ್ನು ನಾಶ ಮಾಡಲು ಕೊಟ್ಟ ಆಂಟಿ ವೈರಲ್ ಮಾತ್ರೆಗಳಾಗಿದ್ದವು. 

ನಂತರ ಮಾಲಾ ರನ್ನು ಕರೆದು ಅವರ ಮಗನಿಗೆ ಯಾವುದೇ ಡ್ರಗ್ಸ್ ಸೇವನೆಯ ಅಭ್ಯಾಸ ವಿಲ್ಲವೆಂದು, ಇದು ಸ್ಕಿಜೋಫ್ರೇನಿಯಾ ಎಂಬ ಕಾಯಿಲೆಯಾಗಿದ್ದು ವಾಸಿ ಮಾಡಲು ಸಾಧ್ಯ ಎಂದು ಹೇಳಿ ಕೆಲವು ಸಪ್ಪ್ರೆಸೆಂಟ್ ಮಾತ್ರೆಗಳ್ಳನ್ನು ಬರೆದು ಮತ್ತೆ ತಮ್ಮನ್ನು ಒಂದು ವಾರದ ಬಳಿಕ ಭೇಟಿಯಾಗಲು ಹೇಳಿದರು. 

ಮನೆಗೆ ಬಂದಾಗ ಆಗಲೇ ಆಕಾಶ್ ರಾತ್ರಿಗೆ ಚಪಾತಿ ಹಿಟ್ಟು ಕಲಸಿ, ಗಿಡಗಳಿಗೆ ನೀರು ಹಾಕಿದ್ದ. ತನ್ನ ಮುದ್ದಿನ ಮಡದಿಗಾಗಿ ರಬ್ಬರ್ ಗಿಡ ಮತ್ತು ಝಮಿಯಾ ಜಿ ಜಿ ಗಿಡ ತಂದು ಅವಳ ಟೇಬಲ್ ಮೇಲಿಟ್ಟಿದ್ದ. ವಯಸಿನಲ್ಲಿ ದೊಡ್ಡವನಾದರೂ ತನಗೆ ಇಂತಹ ಪತಿ ಸಿಕ್ಕಿದು ನನ್ನ ಅದೃಷ್ಟ ಎಂದುಕೊಂಡ ನಿಶಾ ಕರೋನ ಭಯದಿಂದಾಗಿ ಸ್ನಾನಕ್ಕೆ ಹೆಜ್ಜೆ ಹಾಕಿದಳು. 



ಇತ್ತ ಆಕಾಶ್ ಈರುಳ್ಳಿ ಹೆಚ್ಚುವ ತನ್ನ ಕಾಯಕ ಮುಂದುವರೆಸಿದ, ಮಡದಿಗೆ ಮೊಟ್ಟೆ ಫ್ರೈಗೆ ಸಹಾಯವಾಗಲಿ ಎಂದು . 

No comments:

Post a Comment

ನಿರುತ್ತರ

ನಿಮ್ಮಲ್ಲಿ ಭಾವನೆಗಳಿಲ್ಲ ಎಂದು ಅರ್ಥವಲ್ಲ ನನ್ನ ಹಾಗೆ ನಿಮಗೆ  ಭಾವನೆಗಳನ್ನು ವ್ಯಕ್ತಪಡಿಸಲು ಬರುವುದಿಲ್ಲ ಅಷ್ಟೇ.  ನಿಮಗೆ ಸಂತಸವಾಗುವುದಿಲ್ಲ ಎಂದು ಅರ್ಥವಲ್ಲ ನ...