Monday, December 21, 2020

ದಿ ಮ್ಯಾನ್ ಕಂಪನಿ - 'ಯದ್ ಭಾವಂ ತದ್ ಭವತಿ' 

 



​​
 ಅದು ಸಮಯ ಸುಮಾರು ಸಂಜೆ 4ಗಂಟೆ, ಶನಿವಾರವಾದ್ದರಿಂದ  ಜನರ ಮತ್ತು ಸಿಬ್ಬಂದಿಗಳ ಓಡಾಟ ಕಡಿಮೆ ಇತ್ತು, ಆದರೆ ನೀರಗುಂಡಿ ಸ್ವರಸದ ಪ್ರಕೋಪ ತುಸು ಜಾಸ್ತಿ ಅನ್ನುವಷ್ಟೇ ಇತ್ತು. 

ಇಂದು ಶನಿವಾರ, ನಾಳೆ ಬಾನುವಾರ ಆದ್ದರಿಂದ ಡಾಕ್ಟರ್ ಗೆ ಏನು ಮಾಡುವುದು ಎಂದು ಮಗ ಯೋಚಿಸುತ್ತಿದ್ದ, ಕರೋನದ ಸಮಯದಲ್ಲಿ ಬೇರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವದಿರಲಿ, ಅಲೋಪಥಿಯ ವೈದ್ಯರನ್ನು ಭೇಟಿ ಮಾಡುವುದು ಸುಲಭವಾಗಿರಲಿಲ್ಲ. ಕರೋನ ರಕ್ತ ಪರೀಕ್ಷೆಗೆ ಹಣ ಪೀಕುವುದು ಬಹುತೇಕ ಸಾಮಾನ್ಯವಾಗಿತ್ತು. ಪ್ರತಿಯೊಂದು ಕಾಯಿಲೆಗೂ ಶೀಘ್ರ ಔಷದಿ ಕೊಡುವುದು  ಅಲೋಪಥಿಯವರ ಅಭ್ಯಾಸವಾದರೆ. ಏನೂ ಕೊಡದೆ ಸುಮ್ಮನಿದ್ದು ನೋಡುವುದು ಆಯುರ್ವೇದದ ಪದ್ಧತಿ. 

ಪದೇ ಪದೇ ತೇಗು , ವಾಕರಿಕೆಗೆ ದೇಹ ಬಳಲುತ್ತಾ ಸಾಗಿತ್ತು ಆದರೆ ಸಿಕ್ಕಿದು ಬಿಸಿನೀರು ಕುಡಿಯಿರಿ ಎನ್ನುವ ಸಲಹೆ. ಆಗ ಬಂದ ಯುವ ವೈದ್ಯೆಯೊಬ್ಬರು ಅಮ್ಮನನ್ನು ನೋಡಿ ಸ್ವಲ್ಪ ವಾಕ್ (ಕನ್ನಡದಲ್ಲ ಇಂಗ್ಲಿಷ್ walk) ಮಾಡಿ ಎಂದರು. 
ಮಾರನೇ ದಿನ ತಮಗೆ ಕರ್ತವ್ಯವಿರದಿದ್ದರೂ ಕೂಡ ನಮ್ಮನ್ನು ನೋಡಲು ಬಂದು, ಕ್ಷೇಮ ವಿಚಾರಿಸಿ, ಧೈರ್ಯ ತುಂಬಿ ಏನಾದರು ತೊಂದರೆ ಇದ್ದರೇ ನನಗೆ ಫೋನ್ ಮಾಡಿ ಎಂದು ತಮ್ಮ ಮೊಬೈಲ್ ನಂಬರ್ ಕೊಟ್ಟು ಹೋದರು.  

ಇದಕ್ಕಿಂತ ಮೊದಲು ಎಲ್ಲ ಯುವ ವೈದ್ಯರ ಬಗ್ಗೆ ನನಗಿದ್ದ ಭಾವನೆಯೆಂದರೆ ಹುಡುಗಾಟದ ವೈದ್ಯರು ಕಾಟಾಚಾರಕ್ಕೆ ರೌಂಡ್ಸ್ ಗೆ ಬಂದು ನಂತರ ಮೊಬೈಲ್ನಲ್ಲಿ ಸಮಯ ಕೊಲ್ಲುತ್ತಾರೆ ಅವರಿಗೆ ರೋಗಿಯ ನೋವು ಅರ್ಥವಾಗುವುದಿಲ್ಲ ಎಂಬ ಬಾವನೆಯಲ್ಲೇ ಇದ್ದೆ 

ಇದರ ಪರಿಣಾಮ ಮೊದಲು ತಾಗಿದ್ದು ಅವರು ಮೊದಲ ದಿನ ಬಂದು ನಮ್ಮ ಮಾಹಿತಿಗಳನ್ನು ರೋಗಿಗಳ ಫೈಲ್ಗೆ ಗೆ ತುಂಬುತ್ತ ಇದ್ದಾಗ.  ನಾನು ಎಲ್ಲ ಮಾಹಿತಿಯನ್ನು ಕಾಟಾಚಾರಕ್ಕೆ ಹೇಳುತ್ತಿದ್ದೆ.  ಇವರು ಯಾವ ಮಹಾ ವೈದ್ಯರು ಎಂಬ ನನ್ನ ವರ್ತನೆ ನನಗೆ ಈಗ ಅಸಹ್ಯ್ಯ ಹುಟ್ಟಿಸುವಂತಿತ್ತು. ನಾನು ಕೇವಲ ದುರಹಂಕಾರದ ವ್ಯಕ್ತಿಯಾಗಿದ್ದೆ ನಾನು ದೊಡ್ಡ ಶಿಕ್ಷಿತ ಹಾಗೂ ತಿಳಿದವನೆಂಬ ಭ್ರಮೆ ನನ್ನನ್ನು ಸುತ್ತುವರೆದಿತ್ತು. 

ನಂತರ ಆ ಯುವ ವೈದ್ಯೆ ಪ್ರತಿ ದಿನ ಅಮ್ಮನನ್ನು ನೋಡಲು ಬಂದು ಅಮ್ಮನ ಅರೋಗ್ಯ ವಿಚಾರಿಸಿ, ಕೆಲವು ಸಲಹೆಗಳನ್ನು ನೀಡಿ ವಾಪಸಾಗುತ್ತಿದ್ದರು.  ಅನೇಕ ವೇಳೆ ನನ್ನ ಎಲ್ಲ ಪ್ರಶ್ನೆಗಳಿಗೆ ಬಹು ತಾಳ್ಮೆಯಿಂದ ಉತ್ತರಿಸಿ ಹೋಗುತ್ತಿದ್ದರು. ಬದುಕೆಂದರೆ ಸಾಧನೆ, ಪೈಪೋಟಿ, ಸೇಡು ತೀರಿಸಿಕೊಳ್ಳುವ ಅವಕಾಶ ಎಂದು ಕೊಂಡಿದ್ದವನಿಗೆ ; ಸಮಾಧಾನ, ತಾಳ್ಮೆ ಮತ್ತು ಸಹಾಯ ಸುಂದರವಾದ ಜೀವನದ ಸೋಪಾನ ಎಂಬ ಅಂಶ ಮನಸ್ಸಿಗೆ ನಾಟಲು ಶುರುವಾಯಿತು. 

ಪ್ರತಿಬಾರಿ ಯುವ ವೈದ್ಯೆ ಬಂದಾಗಲೂ ಅಮ್ಮನ ಅರೋಗ್ಯ ವಿಚಾರಿಸುತ್ತಿದ್ದರು; ಅಮ್ಮನಂತೂ ಅವರು ಒಂದು ದಿನ ಬರದೇ ಹಾಗೆ ಹಾಸ್ಟೆಲ್ ಗೆ ಹೋದಾಗ ಇವತ್ತು ಬರಲೇ ಇಲ್ಲ ಅಂತ ಹೇಳುತ್ತಿದ್ದರು; ಆದರೆ ಬೇರೆ ಚಿಕಿತ್ಸೆಗಳ ನಡುವೆ ಬೆಳಗಿನಿಂದ ಸಂಜೆವರೆಗೂ ಸಮಯ ಕಳೆದು ಹೋಗುತ್ತಿತ್ತು.  ಮರಳಿನ ಶಾಖ ಕೊಡುವ ಸಿಬ್ಬಂದಿ ಕೂಡ ಅಮ್ಮನ ಬಗ್ಗೆ ಬಾರಿ ಕಾಳಜಿ ವಹಿಸುತ್ತಿದ್ದರು; ಅಮ್ಮನಂತೂ ಈ ಆಸ್ಪತ್ರೆ ಬೇರೆ  ಆಸ್ಪತ್ರೆಗಳಂತಲ್ಲ; ಇಲ್ಲಿಯ ಎಲ್ಲಾ ಸಿಬ್ಬಂದಿ ಮನ ಇರುವ ಮನುಜರು ಎಂದು ತಮಗೆ ಕರೆ ಮಾಡಿದವ್ರೆಲ್ಲರಿಗೂ ಹೇಳುತ್ತಿದ್ದರು.  ಇದೆಲ್ಲದರ ಮದ್ಯೆ ತಿಂಡಿ - ಊಟ ಸಮಯ ಬಂದಾಗ ಅಮ್ಮ ಮುಖ ಸಣ್ಣಗೆ ಮಾಡುತ್ತಿದ್ದರು. ಕ್ಯಾಂಟೀನ್ ನವನು ಕೊಡುವ ಊಟ ತಿಂಡಿಯಲ್ಲಿ ಏನು ಇರುತ್ತಿರಲಿಲ್ಲ. ಅಡಿಗೆಯಲ್ಲಿ ಎಲ್ಲರಿಗು ಗುರುವಾದ ಅಮ್ಮನಿಗೆ ಏನು ಮಾಡಿದರು ಇಲ್ಲಿಯ ಊಟ ಪೂರ್ತಿ ತಿನ್ನಲು ಆಗುತ್ತಿರಲಿಲ್ಲ.  ಕ್ಯಾಂಟೀನ್ ನ ಅಡುಗೆ ಭಟ್ಟ ಎಲ್ಲಿ ಅಡುಗೆ ಕಲಿತ ಎನ್ನುವುದು ಅವರ ನಿತ್ಯದ ಪ್ರಶ್ನೆಯಾಗಿತ್ತು.  ಇಷ್ಟು ಕೆಟ್ಟದಾಗಿ ಅಡುಗೆ ಮಾಡಲು ಸಾಧ್ಯವೇ ಇಲ್ಲ. ಇದು ಉದ್ದೇಶಪೂರ್ವಕ ಕೆಲಸ ಎಂಬುದು ಅವರ ನಂಬಿಕೆ 

ಸಂಜೆ ಎಲ್ಲ ಚಿಕಿತ್ಸೆ ಮುಗಿದ ಬಳಿಕ, ಅಲ್ಲಿನ ಪಾರ್ಕಿನಲ್ಲಿ ತಿರುಗಾಡುವುದು ಒಂದು ರೂಢಿಯಾಗಿತ್ತು, ಅಲ್ಲಿನ ಸಸ್ಯವನದಲ್ಲಿ ತಿರುಗುತ್ತ, ಕಾಲೇಜಿನ ಮುಂದೆ ಸಾಗಿ, ಲೇಡೀಸ್ ಹಾಸ್ಟೆಲ್ ಬರುವ ಮುಂಚೆ  U ಟರ್ನ್ ತೆಗೆದುಕೊಂಡು ಅಲ್ಲಿನ  ಸಿಮೆಂಟ್ ಬೆಂಚ್ನಲ್ಲಿ ಕುಳಿತು ಸ್ವಲ್ಪ ಸಮಯದ ನಂತರ ಸುಮಾರು  6 - 6.30ಕ್ಕೆ ಮತ್ತೆ ವಾರ್ಡಿಗೆ ಬರುವುದು ನಮ್ಮಗಿದ್ದ ಒಂದೇ ದಾರಿ. 

ಒಂದು ದಿನ ಹಾಸ್ಟೆಲ್ನ ಕೆಲವು ಉತ್ತರ ಭಾರತದ ಹುಡುಗಿಯರು; ಕ್ಯಾಂಟೀನ್ ನವನ ಬಳಿ " ಬೈಯ್ಯ, ಭೇಲ್ ಪೂರಿ ಕರೋಗೆ" ಅಂತ ಕೇಳುತ್ತ ಇದ್ದರು ಅವನು ಇಲ್ಲ ಅಂದ. ಇದನ್ನು ಕೇಳಿಸಿಕೊಂಡ ಅಮ್ಮ ಕಾಲೇಜನ ಹುಡುಗಿಯರಿಗೆ ಚಾಟ್ಸ್ ಬೇಕು ಪಾಪ ಇಲ್ಲಿ ಏನು ಇಲ್ಲ ಅಂತ ಬೇಜಾರು ಮಾಡಿಕೊಂಡಿದ್ದು ಆಯಿತು. 

ಅಲ್ಲಿರುವ ತುಂಬಾ ಯುವ ವೈದ್ಯ ಮತ್ತು ವೈದ್ಯೆಯರು ಮೈಸೂರಿನಲ್ಲಿ ಮನೆ ಮಾಡಿಕೊಂಡು ಅಥವಾ ಪೇಯಿಂಗ್ ಗೆಸ್ಟ್ ಆಗಿ ಬಂದು ಹೋಗುವುದು ಮಾಡುತ್ತಾರೆ. ಕೇವಲ ಬೆರಳೆಣಿಕೆಯ ಮಂದಿ ಮಾತ್ರ ಹಾಸ್ಟೆಲ್ನಲ್ಲಿ ಇದ್ದಾರೆ.  "ಕಾಲೇಜು ಲೈಫ್ ಇಸ್ ಗೋಲ್ಡನ್ ಲೈಫ್ " ಎನ್ನುವುದು ಎಲ್ಲಾ ಸೀನಿಯರ್ ಗಳು, ಮನೆಯ ದೊಡ್ಡವರು ಹೇಳಿ ಕೊಟ್ಟ ಮಂತ್ರ ಇದನ್ನು ಬೇರೆ ತರಹ  ತಿಳಿದುಕೊಂಡು ಬದುಕಿನ ಹಳಿ ತಪ್ಪಿದವರು ಎಷ್ಟಿಲ್ಲ? ಹಾಸ್ಟೆಲ್ನಲ್ಲಿ ಇರುವುದು ಒಂದು ಸಾಧನೆಯೇ ಸರಿ ಏಕೆಂದರೆ  ಅಲ್ಲಿ ಚಾಟ್-  ಐಸ್ ಕ್ರೀಮ್ ಸಂಜೆಗಳು, ಹುಟ್ಟುಹಬ್ಬದ ಪಾರ್ಟಿಗಳು, 
ಗೆಳೆಯನ / ಗೆಳತಿಯ ಜೊತೆ ಜಾಲಿ ರೈಡ್ಗಳು ಇರುವುದಿಲ್ಲ. ಸಾಲ ಮಾಡಿಯಾದ್ರು ತುಪ್ಪ ತಿನ್ನೊದಿಕ್ಕೆ ಹಾಸ್ಟೆಲ್ ನ  ವಾರ್ಡನ್ ಗಳು ಬಿಡುವುದಿಲ್ಲ. 

ಹೀಗಿರುವಾಗ ಹಾಸ್ಟೆಲ್ನಲ್ಲೇ ಊಟ ಮಾಡಿ;  ಅಲ್ಲೇ ಇದ್ದು ಕರ್ತವ್ಯ ನಿರ್ವಹಿಸುವುದು  ಸಾಮಾನ್ಯ ಮಾತಲ್ಲ. ವಯಸ್ಸಿಗನುಗುಣವಾದ ಆಸೆಯನ್ನೆಲ್ಲ ಮೀರಿ ಯೋಗಿನಿಯಂತೆ ಬದುಕುವುದು ಸಾಮಾನ್ಯರಿಗೆ ಕಷ್ಟ .  विद्यातुराणां न सुखं न निद्रा  ಅನ್ನೋದೇನೋ ಸರಿ.  ಆದರೆ ಇಷ್ಟೊಂದು ಶಿಸ್ತು ಮತ್ತು ನೇಮ ? 





ಸರಿ ಹಾಗು ಹೀಗೂ ಒಂದು ವಾರ ಕಳೆದ ನಂತರ, ನಾವು ಹೊರಡುವ ಸಮಯ ಬಂದಾಗ ನಾನು ಗಮನಿಸಿದ ಅಂಶವೆಂದರೆ ಹೊರಡುವ ದಿನ ಆ ಯುವ ವೈದ್ಯರು ಬರಲೇ ಇಲ್ಲ.  ಅವರಿಗೆ ಒಂದು ಧನ್ಯವಾದ ಅರ್ಪಿಸಿ ಹೋಗುವ ಎಂದು ಅಂದುಕೊಡಿದ್ದು ನಡೆಯಲೇ ಇಲ್ಲ.  

ಅವರಿಗೆ ಮೊಬೈಲ್ ಮೂಲಕ ಕಳುಹಿಸಿದ ಸಂದೇಶಗಳಿಗೆ ಒಂದು ವಾಕ್ಯದಲ್ಲೇ ಉತ್ತರ ಬರುತ್ತಿತ್ತು. ವಾಕ್ ಮಾಡಿ ಎಂದವರಿಗೆ ವಾಕ್ (ಕನ್ನಡದ ವಾಕ್ ) ಮಾಡಲು ಕಷ್ಟವೇ? ಇಲ್ಲ ಯೋಗಿನಿಯ ಭಾವ ಹೀಗೆಯೇ ?

ತಾವು ಮತ್ತೊಮ್ಮೆ ಈ  ಲೇಖನದ ಶೀರ್ಷಿಕೆ ಓದಲು ವಿನಂತಿ 










































No comments:

Post a Comment

ನಿರುತ್ತರ

ನಿಮ್ಮಲ್ಲಿ ಭಾವನೆಗಳಿಲ್ಲ ಎಂದು ಅರ್ಥವಲ್ಲ ನನ್ನ ಹಾಗೆ ನಿಮಗೆ  ಭಾವನೆಗಳನ್ನು ವ್ಯಕ್ತಪಡಿಸಲು ಬರುವುದಿಲ್ಲ ಅಷ್ಟೇ.  ನಿಮಗೆ ಸಂತಸವಾಗುವುದಿಲ್ಲ ಎಂದು ಅರ್ಥವಲ್ಲ ನ...